ಆ್ಯಪ್ನಗರ

ಮೊದಲ ರಾತ್ರಿಯ ಖರ್ಚಿನ ಲೆಕ್ಕ ಕೇಳಿದಳು!

ಕೌಟುಂಬಿಕ ನ್ಯಾಯಾಲಯಗಳಿಗೆ ಹೊಸ ಬಗೆಯ ತಲೆನೋವು ಶುರುವಾಗಿದೆ. ವಿವಾಹ ವಿಚ್ಛೇದನ ಪ್ರಕರಣ ಬಗೆಹರಿಸೋದಕ್ಕಿಂತ ಮದುವೆ ವೇಳೆ ವಧು-ವರರ ಕುಟುಂಬದವರು ಪರಸ್ಪರ ಕೊಡುವ ‘ಉಡುಗೊರೆ’ಗಳನ್ನು ಎರಡೂ ಕಡೆಯವರಿಗೆ ಸಮಾನವಾಗಿ ಹಂಚೋದೇ ಒಂದು ದೊಡ್ಡ ಕೆಲಸವಾಗಿಬಿಟ್ಟಿದೆ.

Vijaya Karnataka Web | 9 Mar 2016, 4:00 am
Vijaya Karnataka Web divorce case asked to calculate the cost of the first night
ಮೊದಲ ರಾತ್ರಿಯ ಖರ್ಚಿನ ಲೆಕ್ಕ ಕೇಳಿದಳು!
* ಮದುವೆ ಸಂದರ್ಭದಲ್ಲಿ ಬಂದ ಗಿಫ್ಟ್ಸ್ ಹಂಚಿಕೊಳ್ಳೋ ವ್ಯಾಜ್ಯಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ

* ಡೈವೋರ್ಸ್ ಪಡೆದ ಮೇಲೂ ಕೌಟುಂಬಿಕ ಕೋರ್ಟ್‌ಗಳಿಗೆ ಗಿಫ್ಟ್ ಹಂಚಿಕೆಯ ಕಷ್ಟ!
* ಶ್ರೀಕಾಂತ ಹುಣಸವಾಡಿ ಬೆಂಗಳೂರು
ಕೌಟುಂಬಿಕ ನ್ಯಾಯಾಲಯಗಳಿಗೆ ಹೊಸ ಬಗೆಯ ತಲೆನೋವು ಶುರುವಾಗಿದೆ. ವಿವಾಹ ವಿಚ್ಛೇದನ ಪ್ರಕರಣ ಬಗೆಹರಿಸೋದಕ್ಕಿಂತ ಮದುವೆ ವೇಳೆ ವಧು-ವರರ ಕುಟುಂಬದವರು ಪರಸ್ಪರ ಕೊಡುವ ‘ಉಡುಗೊರೆ’ಗಳನ್ನು ಎರಡೂ ಕಡೆಯವರಿಗೆ ಸಮಾನವಾಗಿ ಹಂಚೋದೇ ಒಂದು ದೊಡ್ಡ ಕೆಲಸವಾಗಿಬಿಟ್ಟಿದೆ.

ವಿಚ್ಛೇದನ ಪ್ರಕರಣಗಳಲ್ಲಿ ಪತಿ-ಪತ್ನಿ ನಡುವೆ ಗಿಫ್ಟ್ ಹಂಚಿಕೆ ಕಾರಣಕ್ಕೆ ವಿವಾದ ಏರ್ಪಟ್ಟ ಸಾಕಷ್ಟು ಘಟನೆಗಳಿವೆ. ಮದುವೆ ವೇಳೆ ಹಲವು ಗಿಫ್ಟ್ ನೀಡಿದ್ದಾಗಿ ಪತ್ನಿ ಕಡೆಯವರು ಆರೋಪಿಸುವುದೂ ಸಾಮಾನ್ಯವಾಗಿದೆ. ಹಾಗೇ ಪತಿಯ ಕಡೆಯವರು, ‘‘ಅಷ್ಟೇನೂ ಕೊಟ್ಟಿಲ್ಲ,’’ ಎನ್ನುವುದೂ ಮಾಮೂಲಿಯಾಗಿದೆ. ಇಂತಹ ಸಂದರ್ಭದಲ್ಲಿ ಸತ್ಯ ಪತ್ತೆ ಹಚ್ಚುವುದು ಕೋರ್ಟುಗಳಿಗೂ ತಲೆನೋವು.

ಒಂದು ಪ್ರಕರಣದಲ್ಲಿ ವಿಚ್ಛೇದನಕ್ಕೆ ಒಪ್ಪಿದ ಮಹಿಳೆ, ಮೊದಲ ರಾತ್ರಿಗೆ ಖರ್ಚಾದ ಹಣ ವಾಪಸ್ ನೀಡುವಂತೆ ಬೇಡಿಕೆ ಮುಂದಿಟ್ಟರೆ, ಮತ್ತೊಂದು ಪ್ರಕರಣದಲ್ಲಿ ರಾಜಿ ಸಂಧಾನದ ವೇಳೆ ಚಿನ್ನದ ಮಾಂಗಲ್ಯ ಸರದ ಹಂಚಿಕೆಯನ್ನು ಬಗೆಹರಿಸುವುದೇ ಕಷ್ಟದ ಕೆಲಸವಾಗಿತ್ತು. ಎರಡೂ ಪ್ರಕರಣಗಳ ವಿವರ ಇಲ್ಲಿದೆ.

ಮೊದಲ ರಾತ್ರಿಯ ಹೂವಿನಲಂಕಾರ:

ಪತ್ನಿ ಬಾಂಕ್ ಉದ್ಯೋಗಿಯ ಮಗಳು. ಪತಿ ಸಾಫ್ಟ್‌ವೇರ್ ಎಂಜಿನಿಯರ್. ಮದುವೆಯಾದ ತಿಂಗಳಲ್ಲಿ ಪತಿ-ಪತ್ನಿ ನಡುವೆ ರಂಪಾಟ ನಡೆದು, ಜೊತೆಯಲ್ಲಿರಲು ಸಾಧ್ಯವೇ ಇಲ್ಲ ಎಂದಾದಾಗ ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಪತಿ ವಿಚ್ಛೇದನಕ್ಕೆ ಸಲ್ಲಿಸಿದ ಅರ್ಜಿಗೆ ಪತ್ನಿಯೂ ಒಪ್ಪಿದಳು. ಆದರೆ ವಿಚ್ಛೇದನಕ್ಕೆ ಮೊದಲು ತಾನು ಮದುವೆಗೆ ಮಾಡಿರುವ ಖರ್ಚು ಭರಿಸಲೇಬೇಕೆಂದು ಪತ್ನಿಯ ತಾಯಿ ಪಟ್ಟು ಹಿಡಿದರು. ಇದಕ್ಕೆ ಪತಿಯೂ ಒಪ್ಪಿದ. ಆದರೆ ಆಕೆ ಮುಂದಿಟ್ಟ ಪಟ್ಟಿ ನೋಡಿ ಹುಡುಗನ ಮನೆಯವರು ಸುಸ್ತಾಗಿ ಹೋದರು. ಕಾರಣ ಪಟ್ಟಿಯಲ್ಲಿ ಮದುವೆಗೆ ಮಾಡಿದ ಖರ್ಚಿನ ಜೊತೆ ಮೊದಲ ರಾತ್ರಿಗೆ ಮಾಡಿದ ಹೂವಿನ ಅಲಂಕಾರ, ಇನ್ನಿತರ ವಸ್ತುಗಳ ಖರ್ಚಿನ ಬಾಬ್ತೂ ಇತ್ತು. ಅಷ್ಟೇ ಅಲ್ಲ ಮದುವೆಗೆ ದೂರದ ಊರಿನಿಂದ ಪುರೋಹಿತರನ್ನು ಕರೆತಂದ ವೆಚ್ಚವೂ ಇತ್ತು. ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದ ಪತಿ, ಅವರು ಕೇಳಿದ್ದಷ್ಟನ್ನು ಕೊಟ್ಟು ಸುಮ್ಮನಾದ.

ಮಾಂಗಲ್ಯ ಸರದ ಹಕ್ಕು:

ಮತ್ತೊಂದು ಪ್ರಕರಣ ಹೀಗಿದೆ. ಆಕೆ ಮತ್ತು ಆತ ಇಬ್ಬರೂ ಸಾಫ್ಟ್‌ವೇರ್ ಎಂಜಿನಿಯರ್ಸ್‌. ಒಂದೇ ವೃತ್ತಿಯಾದ್ದರಿಂದ ಪರಸ್ಪರ ಒಪ್ಪಿ ಮದುವೆಯಾಗಿದ್ದರು. ಒಂದೇ ವಾರಕ್ಕೆ ಮನಸ್ತಾಪ ಶುರುವಾಯ್ತು. ಕೊನೆಗೆ ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ. 15 ಲಕ್ಷ ರೂ. ಪರಿಹಾರ ಕೋರಿದ್ದ ಪತ್ನಿ ಕೊನೆಗೆ 4 ಲಕ್ಷ ರೂ.ಗೆ ಒಪ್ಪಿದಳು. ನಂತರದ ಕತೆಯೇ ಬೇರೆ. ಹೆಂಡತಿ ತನ್ನ ಪೋಷಕರೊಂದಿಗೆ ಗಂಡನ ಮನೆಗೆ ಹೋಗಿ ಮದುವೆಯಲ್ಲಿ ಬಂದ ಉಡುಗೊರೆಗಳನ್ನು ಗಂಟು ಕಟ್ಟಿಕೊಂಡಳು. ಕೊನೆಗೆ ಮನೆ ಬಾಗಿಲಿಗೆ ಹಾಕಿದ್ದ ಮ್ಯಾಟ್ ಕೂಡ ಪ್ಯಾಕ್ ಮಾಡಿಕೊಂಡಳು. ಆದರೆ ಅದೆಲ್ಲಕ್ಕಿಂತ ರಂಪಾಟವಾಗಿದ್ದು ಮಾಂಗಲ್ಯ ಸರದ ಸಮಸ್ಯೆ. ಎಲ್ಲ ತಗಾದೆಯ ಬಳಿಕ ಮಾಂಗಲ್ಯ ಸರವನ್ನು ಕತ್ತರಿಸಿ ಅರ್ಧರ್ಧ ಹಂಚಿಕೊಳ್ಳಲು ಮುಂದಾಗಿದ್ದರು. ಆದರೆ ಹಿರಿಯರು ಸುತಾರಾಂ ಒಪ್ಪಲಿಲ್ಲ. ಸರವನ್ನು ಯಾರಾದರೂ ಒಬ್ಬರು ಇಟ್ಕೊಳ್ಳಿ ಅಥವಾ ದೇವಸ್ಥಾನದ ಹುಂಡಿಗೆ ಹಾಕಿ ಅಂತ ಸಲಹೆ ನೀಡಿದರು. ಕೊನೆಗೆ ಆ ಸರ ಸೇರಿದ್ದು ದೇವರ ಹುಂಡಿಗೆ.

ಇಂತಹ ಪ್ರಕರಣಗಳು ಹಲವು. ಇತ್ತೀಚಿನ ದಿನಗಳಲ್ಲಿ ವಿವಾಹ ವಿಚ್ಛೇದನದ ಪ್ರಕರಣಗಳು ಕೋರ್ಟ್ ಕಟ್ಟೆ ಏರುವುದು ಹೆಚ್ಚಾಗಿರುವುದರ ಜತೆಗೆ ಬಂದ ಗಿಫ್ಟ್‌ಗಳನ್ನು ಸರಿಯಾಗಿ ವಿಲೇವಾರಿ ಮಾಡುವುದೇ ಕಷ್ಟದ ಕೆಲಸವಾಗಿದೆ.

ಮದುವೆ ಜತೆ ಗಿಫ್ಟ್ ಕೂಡ ರಿಜಿಸ್ಟರ್ ಮಾಡಿಸ್ಬೇಕು!

ಕೇರಳದಲ್ಲಿ ಇಂತಹ ಪ್ರಕರಣಗಳಿಗೆ ಬ್ರೇಕ್ ಹಾಕಲು ಮದುವೆ ನೋಂದಣಿ ವೇಳೆ ಪರಸ್ಪರರ ಉಡುಗೊರೆಗಳನ್ನೂ ನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.

-----

ಇತ್ತೀಚೆಗೆ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಮದುವೆ ಸಂದರ್ಭದಲ್ಲೇ ಉಡುಗೊರೆಗಳ ಪಟ್ಟಿ ಮಾಡಿ ಅದಕ್ಕೆ ಎರಡೂ ಕಡೆಯವರು ಸಹಿ ಹಾಕಿಸಿಕೊಂಡಿರುವ ಘಟನೆಗಳನ್ನು ನಾವು ನೋಡಿದ್ದೇವೆ. ಹಾಗಾಗಿ ಗಿಫ್ಟ್ ನೋಂದಣಿ ಸಹ ಕಡ್ಡಾಯ ಮಾಡುವುದು ಒಳ್ಳೆಯದು. ಇದರಿಂದ ಅನಗತ್ಯ ವ್ಯಾಜ್ಯಗಳು ತಪ್ಪುತ್ತವೆ.

* ಟಿ.ಎಸ್. ರಾಜರಾಜೇಶ್ವರಿ, ನ್ಯಾಯವಾದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ